ಚೋಮನ ಮೂರನೇ ತಲೆಮಾರು ಈ ರೈತ : ಭೂಮಿಯ ಒಡೆಯ `ದೇವಯ್ಯ' !
`ಫಲಶ್ರೇಷ್ಠ ಪ್ರಶಸ್ತಿ' ಪಡೆದ ಕೃಷಿಕ ದಿನ ಪತ್ರಿಕೆ ವಿತರಕ ನಾಡಿಗೆ ಮಾದರಿ ಯುವಕ
ಹದಿನೈದು ವರ್ಷಗಳ ಹಿಂದೆ ಕೂಲಿ ಕಾಮರ್ಿಕ.ನಂತರ ಆಂದೋಲನ ಪತ್ರಿಕೆಯ ಏಜೆಂಟ್.ತದನಂತರ ಪೋಟೊ ಸ್ಟೂಡಿಯೋ ಮಾಲೀಕ.ಇಂದು ಐದಾರು ಎಕರೆ ಭೂಮಿಗೆ ಒಡೆಯ. ಹಾಲಿ ಗ್ರಾಮ ಪಂಚಾಯಿತಿ ಸದಸ್ಯ. ಅಷ್ಟೇ ಅಲ್ಲ ಬಾಗಲಕೋಟ ತೋಟಗಾರಿಕ ಕೃಷಿ ವಿಶ್ವವಿದ್ಯಾನಿಲಯದ 2016-17 ನೇ ಸಾಲಿನ `ಫಲಶ್ರೇಷ್ಠ ಪ್ರಶಸ್ತಿ'ಗೆ ಚಾಮರಾಜನಗರ ಜಿಲ್ಲೆಯಿಂದ ಆಯ್ಕೆಯಾದ ಸಾಧಕ ಈ ವಾರದ ಬಂಗಾರದ ಮನುಷ್ಯ.
ಈ ಅನ್ನದಾತನ ಹೆಸರು ದೇವಯ್ಯ ರಾಘವಪುರ. ಮೈಸೂರು - ಗುಂಡ್ಲುಪೇಟೆ ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡಂತೆ ಇರುವ ಗ್ರಾಮ ರಾಘವಪುರ.ದಶಕಗಳ ಹಿಂದೆ ವಾಸಿಸಲು ಪುಟ್ಟ ಮನೆಯೊಂದನ್ನು ಹೊರತುಪಡಿಸಿದರೆ ಅಂಗೈ ಅಗಲ ಜಾಗಕೂಡ ಇರದ ಕುಟುಂಬ `ದುಡಿಮೆಯೇ ದೇವರು' ಎಂಬ ನಂಬಿಕೆಯ ಮೇಲೆ ನೆಮ್ಮದಿಯ ಜೀವನ ಕಟ್ಟಿಕೊಂಡಿದೆ. ಪುಟ್ಟಮಾದಮ್ಮ ಮತ್ತು ದಿ.ವೆಂಕಟಯ್ಯನವರ ಮಗನಾದ ದೇವಯ್ಯ ರಾಘವಪುರ ತನ್ನ ದುಡಿಮೆಯಿಂದ ಹಂತಹಂತವಾಗಿ ಮೇಲೆಬಂದು ಅಕ್ಕಲಪುರದಲ್ಲಿ ಮನೆಮಾತಾಗಿದ್ದಾರೆ.ಪತ್ನಿ ಲಕ್ಷ್ಮಿ ಮತ್ತು ಮೂವರು ಮಕ್ಕಳೊಂದಿಗೆ ಕೃಷಿಯಲ್ಲಿ ಖುಶಿಕಾಣುತ್ತಿದ್ದಾರೆ.

ಚೋಮನ ಮೂರನೇ ತಲೆಮಾರು : ದೇವಯ್ಯರಾಘವಪುರ ಅವರ ಜೀವನಾನುಭವವನ್ನು ಕೇಳುತ್ತಾ ಕುಳಿತ ನನಗೆ ಥಟ್ಟನೆ ಶಿವರಾಮಕಾರಂತರ ಚೋಮನ ದುಡಿ ಕಾದಂಬರಿ ನೆನಪಾಯಿತು. ಅಂಗೈ ಅಗಲ ಭೂಮಿಯನ್ನು ತನ್ನದಾಗಿಸಿಕೊಳ್ಳಬೇಕೆಂಬ ಆಸೆಯೂ ಕೈಗೂಡದೆ ಪರಿತಪಿಸುವ ಚೋಮ ದುಡಿಬಾರಿಸುತ್ತಲೇ ಕೊನೆಯುಸಿರೆಳೆಯುತ್ತಾನೆ. ಬದಲಾದ ಕಾಲಘಟ್ಟದಲ್ಲಿ ಚೋಮನ ಮೂರನೇ ತಲೆಮಾರು ದೇವಯ್ಯನಂತಹವರು ಈಗ ಸ್ವಂತ ಭೂಮಿಯನ್ನು ಹೊಂದುವ ಕನಸನ್ನು ನನಸು ಮಾಡಿಕೊಂಡು ಬದುಕು ಕಟ್ಟಿಕೊಂಡಿದ್ದಾರೆ.
ಪರಿಶ್ರಮ,ದುಡಿಮೆ,ತನ್ನ ಸುತ್ತಲಿಕ ಬದುಕಿನ ಬಗ್ಗೆ ಸಣ್ಣ ಕುತೂಹಲ ಇದ್ದರೆ ಜೀವನದಲ್ಲಿ ನಾಡು ಗಮನ ಸೆಳೆಯುವಂತಹ ಸಾಧನೆ ಮಾಡುವುದು ಸುಲಭ ಎನ್ನುವುದನ್ನು ದೇವಯ್ಯ ಸಾಧಿಸಿ ತೋರಿಸಿದ್ದಾರೆ. ಆ ಮೂಲಕ ನೂರಾರು ಶೋಷಿತರಿಗೆ,ಆಥರ್ಿಕವಾಗಿ ಹಿಂದುಳಿದ ಯುವಕರಿಗೆ ಮಾದರಿಯಾಗಿದ್ದಾರೆ.
"ಚೋಮ ಶಿವರಾಮ ಕಾರಂತರ ಚೋಮನ ದುಡಿ ಕಾದಂಬರಿಯ ನಾಯಕ.ಅಂಗೈಯಗಲದ ಭೂಮಿಯ ಒಡೆಯನಾಗಲು ವ್ಯರ್ಥ ಪ್ರಯತ್ನ ನಡೆಸಿದವ.ಸ್ಥಳೀಯ ಸಂಪ್ರದಾಯ ಇದನ್ನು ಒಪ್ಪಲು ಸಾಧ್ಯವೇ ಇಲ್ಲ.ಸೋತ,ಹತಾಶ ವ್ಯಕ್ತಿಯಾಗಿ ಆತ ಸಾಯುತ್ತಾನೆ.ಅಂಗೈಯಗಲ ಭೂಮಿ ಕೊಡುವಂತೆ ಪದೇ ಪದೇ ಆತ ಒಡೆಯನನ್ನು ಕೇಳುವ ಸನ್ನಿವೇಶ ಹೃದಯ ವಿದ್ರಾವಕ.ಆದರೆ ಆತನ ಒಡೆಯ ಈ ವಿಷಯದಲ್ಲಿ ಅಸಹಾಯಕ.ಆದರೆ ಬೇಡುವ ದಿನಗಳು ಮುಗಿದು,ಹಕ್ಕುಗಳ ಹಾಗೂ ಹೋರಾಟದ ಹೊಸಯುಗ ಬಂದಿದೆ.ಭೂಮಿಯ ಸಲುವಾಗಿ ಚೋಮನ ಆಸೆ ಇಂದು ವಿಸ್ತಾರಗೊಂಡು ಎಲ್ಲಾ ಬಗೆಯ ಹಕ್ಕುಗಳನ್ನು ಪಡೆಯುವ ದೃಢನಿಧರ್ಾರವಾಗಿ ರೂಪುಗೊಂಡಿದೆ (ಡಿ.ಆರ್.ನಾಗರಾಜ್-ಉರಿ ಚಮ್ಮಾಳಿಗೆ)" ಡಿಆರ್ ಮಾತು ದೇವಯ್ಯವನರನ್ನು ನೋಡಿದಾಗ ನಿಜ ಎನಿಸಿತು.

ಆಂದೋಲನ ಪತ್ರಿಕೆಯ ಸಂಪಾದಕರಾಗಿದ್ದ ರಾಜಶೇಖರ ಕೋಟಿ ಅವರ ಸಹಕಾರ,ಬೆಂಬಲ ಮತ್ತು ಸುತ್ತಮುತ್ತಲಿನ ಗ್ರಾಮಗಳ ಎಲ್ಲ ವರ್ಗದ ಜನರ ನೆರವು ತಾನು ಈ ಮಟ್ಟಕ್ಕೆ ಬರಲು ಕಾರಣವಾಯಿತು ಎಂದು ನೆನಪಿಸಿಕೊಳ್ಳುವ ದೇವಯ್ಯ ಅಕ್ಕಲಪುರದ ತೋಟದ ಮನೆಯಲ್ಲಿ ಕುಳಿತು ಮಾತನಾಡುತ್ತಾ ಹೋದರು ನಾನು ಬೆರಗಿನಿಂದ ಕೇಳಸಿಕೊಳ್ಳುತ್ತಾ ಹೋದೆ...
ಹಿಂತಿರುಗಿ ನೋಡಿದಾಗ : "ಇಪ್ಪತ್ತು ವರ್ಷಗಳ ಹಿಂದೆ ನಮ್ಮದು ಸಾಮಾನ್ಯ ಬಡಕುಟುಂಬ.ರಾಘವಪುರದಲ್ಲಿ ಇರಲು ಒಂದು ಸಣ್ಣ ಮನೆಯೊಂದನ್ನು ಹೊರತುಪಡಿಸಿ ನಮಗೇನೂ ಇರಲಿಲ್ಲ.ನಮ್ಮ ತಂದೆತಾಯಿ ಬೇರೆಯವರ ಜಮೀನಿಗೆ ಕೂಲಿ ಕೆಲಸಮಾಡಲು ಹೋಗುತ್ತಿದ್ದರು. ಪ್ರೌಢ ಶಾಲೆವರೆಗೆ ಮಾತ್ರ ವಿಧ್ಯಾಭ್ಯಾಸಮಾಡಿದ ನಾನು ಬಡತನದ ಕಾರಣಕ್ಕಾಗಿ ಓದು ಮುಂದುವರಿಸಲು ಆಗಲಿಲ್ಲ.ಕೂಲಿ ಕೆಲಸಕ್ಕೆ ಹೋಗುತ್ತಿದ್ದೆ.ಆಂದೋಲನ ಪತ್ರಿಕೆಗೆ ಮೊದಲು ಏಜೆಂಟನಾದೆ.ಪತ್ರಿಕೆ ತರಿಸಿಕೊಂಡು ಸುತ್ತಮುತ್ತಲಿನ ಗ್ರಾಮಗಳಿಗೆ ಮನೆಮನೆಗೆ ಹೋಗಿ ಹಂಚುತ್ತಿದ್ದೆ. ಆ ಕಾಲಕ್ಕೆ 400 ಪತ್ರಿಕೆಗಳನ್ನು ತರಿಸಿಕೊಳ್ಳುತ್ತಿದ್ದೆ.ಪತ್ರಿಕೆಯ ವಿತರಣೆಯ ಜೊತೆಗೆ ಸಣ್ಣಪುಟ್ಟ ಸುದ್ದಿಗಳನ್ನು ಬರೆಯುವುದನ್ನು ಕಲಿತುಕೊಂಡೆ.ಪೋಟೊ ತೆಗೆಯುವುದನ್ನು ಕಲಿತುಕೊಂಡೆ.ಅಲ್ಲಿಂದ ನನ್ನ ಜೀವನ ಸಂಪೂರ್ಣ ಬದಲಾಯಿತು" ಎಂದು ದೇವಯ್ಯ ತಮ್ಮ ಹಳೆಯ ದಿನಗಳನ್ನು ನೆನಪಿಸಿಕೊಂಡು ಭಾವುಕರಾಗುತ್ತಾರೆ.
ಪತ್ರಿಕೆಯ ಏಜೆಂಟರಾಗುವ ಮೊದಲು ದೇವಯ್ಯ ಅಂಗಡಿಗಳಿಗೆ ಚಕ್ಕಲಿ,ಬಿಸ್ಕೆಟ್,ಖಾರ,ಬನ್ನು ಎಲ್ಲವನ್ನೂ ತಂದು ಹೋಲ್ಸೇಲ್ ದರದಲ್ಲಿ ಮಾರಾಟ ಮಾಡುತ್ತಿದ್ದರು. ಬೆಳಗಿನ ಜಾವ ಐದು ಗಂಟೆಯಿಂದ ರಾತ್ರಿ ಹನ್ನೊಂದು ಗಂಟೆಯವರೆಗೂ ದುಡಿದ ದಿನಗಳೂ ಇವೆ.ಇದೆಲ್ಲಾ ಅವರಿಗೆ ಜೀವನ ಪಾಠವನ್ನು ಕಲಿಸಿವೆ.
ಕೋಟಿ ನೆರವು : "ಹೀಗೆ ಜೀವನ ಸಾಗುತ್ತಿರಬೇಕಾದರೆ ಆಂದೋಲನ ಪತ್ರಿಕೆಯ ವಿತರಣೆಯ ಜೊತೆಗೆ ಬೇಗೂರಿನಲ್ಲಿ ಪೋಟೊ ಸ್ಟುಡಿಯೊ ತೆರೆಯುವ ಆಸೆಯಾಯಿತು.ಆದರೆ ಅಷ್ಟೊಂದು ಹಣ ನನ್ನ ಬಳಿ ಇರಲಿಲ್ಲ.ಆಗ ನೇರವಾಗಿ ನಿಂತದ್ದು ಆಂದೋಲನ ಪತ್ರಿಕೆಯ ಸಂಪಾದಕರಾಗಿದ್ದ ರಾಜಶೇಖರ ಕೋಟಿಯವರ ಬಳಿಗೆ.ಅವರು ಕಾವೇರಿ ಗ್ರಾಮೀಣ ಬ್ಯಾಂಕ್ ಮ್ಯಾನೇಜರ್ ಅವರಿಗೆ ಹೇಳಿ ಮೂರು ಲಕ್ಷ ಸಾಳ ಕೊಡಿಸಿದರು.ಸ್ಟುಡಿಯೊ ಆರಂಭವಾಯಿತು. ಆಗ ಹೀಗಿನಂತೆ ಡಿಜಿಟಲ್ ಯುಗ ಇರಲಿಲ್ಲ.ಪೋಟೊ ಸ್ಟುಡಿಯೋದಿಂದ ದುಡಿದು ಸಾಲತೀರಿಸಿ ಸಾಕಷ್ಟು ಹಣವನ್ನು ಸಂಪಾದಿಸಿದೆ. ನಮ್ಮ ಸುತ್ತಮತ್ತಲಿನ ಗ್ರಾಮಗಳಲ್ಲಿ ಯಾರದೇ ಮನೆಯಲ್ಲಿ ಮದುವೆ ಯಾದರೂ ನನಗೆ ಪೋಟೊ ಆರ್ಡರ್ ಕೊಡುತ್ತಿದ್ದರು. ಎಲ್ಲ ವರ್ಗದ ಜನ ನನ್ನನ್ನು ಅತ್ಯಂತ ಪ್ರೀತಿಯಿಂದ ಕಂಡರು. ಬರುಬರುತ್ತಾ ಪೋಟೊ ಸ್ಟುಡಿಯೋ ಲಾಭದಾಯಕ ಉದ್ಯೋಗವಾಗಿ ಉಳಿಯಲಿಲ್ಲ. ಅದಕ್ಕಾಗಿ ದುಡಿದು ಸಂಪಾದನೆ ಮಾಡಿದ ಹಣದಿಂದ ನಮ್ಮ ಸಮೀಪದಲ್ಲೇ ಇರುವ ಅಕ್ಕಲಪುರದಲ್ಲಿ ಮೂರು ಎಕರೆ 15 ಗುಂಟೆ ಜಮೀನು ಖರೀದಿಸಿದೆ. ಅಲ್ಲಿಂದ ನನ್ನ ಕೃಷಿ ಬದುಕು ಆರಂಭವಾಯಿತು' ಎನ್ನುತ್ತಾರೆ ದೇವಯ್ಯ.
ಅಕ್ಕಲಪುರದಿಂದ `ಆರಂಭ' : "ಅಕ್ಕಲಪುರದಲ್ಲಿ ಜಮೀನು ಖರೀದಿಸಿದಾಗ ಇದು ಖಾಲಿ ಭೂಮಿ.ಇಲ್ಲಿ ಏನೂ ಇರಲಿಲ್ಲ.ಬರಿ ಬಯಲು.ಬೋರ್ ಹಾಕಿಸಿದೆ ನೀರು ಬಂತು.ಕ್ರಮೇಣ ಕಡಿಮೆಯಾದಾಗ ಮತ್ತೊಂದು ಬೋರ್ ಹಾಕಿಸಿದೆ.ಅದರಲ್ಲೂ ಕಡಿಮೆಯಾದಾಗ ಮತ್ತೂ ಎರಡು ಬೋರ್ ಹಾಕಿಸಿದೆ. ಈಗ ಒಟ್ಟು ನಾಲ್ಕು ಬೋರ್ಗಳಿವೆ.ಕೃಷಿ ಹೊಂಡ ನಿಮರ್ಾಣ ಮಾಡಿಕೊಂಡು ಅದರಿಂದ ಎಲ್ಲಾ ಬೆಳೆಗಳಿಗೂ ಹನಿ ನೀರಾವರಿ ಪದ್ಧತಿಯಲ್ಲಿ ನೀರು ಕೊಡುತ್ತಿದ್ದೇನೆ" ಎಂದು ಜಮೀನಿಗೆ ನೀರುತಂದ ತಮ್ಮ ಸಾಹಸವನ್ನು ದೇವಯ್ಯ ಬಿಚ್ಚಿಟ್ಟರು.
ಇತ್ತೀಚಿಗೆ ಎರಡು ಬೋರ್ವೆಲ್ಗಳನ್ನು ಸಾವಿರ ಅಡಿಕೊರೆಸಿದರು ನೀರು ಬರಲಿಲ್ಲ.ಬರಿ ಧೂಳು.ಸರಿ ನೆಲ ಕೊರೆಯುವುದನ್ನು ನಿಲ್ಲಸಿ,ಕೇಸಿಂಗ್ ಪೈಪ್ ಅನ್ನು ಎಳೆದು ಹಾಕಿ ಸುಮ್ಮನ್ನಿದ್ದೆವು.ಮಳೆಯಾದ ನಂತರ ಬೋರ್ವೆಲ್ಗಳನ್ನು ಮುಚ್ಚಿಬಿಡಲು ಹೋದಾಗ ಧೂಳು ಬಂದಿದ್ದ ಜಾಗದಲ್ಲಿ ನೀರು ಇರುವುದು ಕಂಡಿತು.ಮತ್ತೆ ಕೇಸಿಂಂಗ್ ಪೈಪ್ಹಾಕಿ ಮೋಟಾರ್ ಬಿಟ್ಟಾಗ ಎರಡು ಬೋರ್ವೆಲ್ಗಳಲ್ಲೂ ಚೆನ್ನಾಗಿ ನೀರು ಬರುತ್ತಿದ್ದು ಪ್ರಕೃತಿ ವಿಸ್ಮಯವನ್ನು ಕಂಡು ಬೆರಗಾದ ಪರಿಯನ್ನು ಕಣ್ಣರಳಿಸಿ ಹೇಳಿದರು.

ಒಂದು ಎಕರೆ ಪ್ರದೇಶದಲ್ಲಿ ಪಾಲಿಹೌಸ್ ನಿಮರ್ಾಣ ಮಾಡಿಕೊಂಡಿರುವ ದೇವಯ್ಯ ಅದಕ್ಕಾಗಿ ಮಾಡಿದ್ದ ಸಾಲವನ್ನು ತೀರಿಸಿದ್ದಾರೆ.ಕೃಷಿ ಇಲಾಖೆ ಮತ್ತು ತೋಟಗಾರಿಕೆ ಇಲಾಖೆಗಳ ಸಹಾಯಧನದಿಂದ ಪಾಲಿಹೌಸ್ ನಿಮರ್ಾಣ ಮಾಡಿಕೊಂಡಿದ್ದು ದಪ್ಪ ಮೆಣಸಿನಕಾಯಿ,ಟೊಮಟೊ ಬೆಳೆದಿದ್ದಾರೆ. ಕೃಷಿಯ ಬಗ್ಗೆ ಆಸಕ್ತಿ ಇರುವ ದೇವಯ್ಯ ಕೆಲಸಗಳ ಒತ್ತಡದ ನಡುವೆಯೂ ಪ್ರಯೋಗಶೀಲ ರೈತರ ತೋಟಗಳಿಗೆ ಭೇಟಿನೀಡಿ ಹೆಚ್ಚಿನ ಮಾಹಿತಿ ತಿಳಿದುಕೊಳ್ಳುತ್ತಾರೆ. ಕೃಷಿ,ತೋಟಗಾರಿಕೆ ಇಲಾಖೆ.ಜಿಕೆವಿಕೆ ಜೊತೆ ನಿರಂತರ ಸಂಪರ್ಕದಲ್ಲಿದ್ದು ಸರಕಾರದಿಂದ ದೊರೆಯುವ ಎಲ್ಲಾ ಸೌಲಭ್ಯಗಳನ್ನು ಬಳಸಿಕೊಂಡು ಕೃಷಿಯನ್ನು ಲಾಭದಾಯಕ ಉದ್ಯೋಗವನ್ನಾಗಿ ಮಾಡಿಕೊಂಡಿದ್ದಾರೆ.ತಮ್ಮ ಮೂವರು ಮಕ್ಕಳಿಗೂ ಉತ್ತಮ ವಿಧ್ಯಾಭ್ಯಾಸ ಕೊಡಿಸುತ್ತಿರುವ ದೇವಯ್ಯ ಮಾಡುವ ಕೆಲಸವನ್ನು ದೇವರೆಂದು ತಿಳಿದು ಶ್ರದ್ಧೆಯಿಂದ ಮಾಡಿದರೆ ಜೀವನದಲ್ಲಿ ಯಶಸ್ಸು ಸಿಕ್ಕೇ ಸಿಗುತ್ತದೆ ಎಂದು ಆತ್ಮ ವಿಶ್ವಾಸದ ಮಾತುಗಳನ್ನಾಡುತ್ತಾರೆ. ಆಸಕ್ತರು ಹೆಚ್ಚಿನ ಮಾಹಿತಿಗೆ ದೇವಯ್ಯ ರಾಘವಪುರ 9900618597 ಸಂಪಕರ್ಿಸಬಹುದು.