ಗುಡ್ಡಗಾಡಿನಲ್ಲಿ ಪಪ್ಪಾಯಿ ಕೃಷಿಮಾಡಿ ಗೆದ್ದ ರೈತ ಮಹಿಳೆ
ಆಯರಹಳ್ಳಿಯಲ್ಲಿ ಅರಳಿದ ಕುಸುಮ ಇಂದಿರಮ್ಮ
ಸುತ್ತಮುತ್ತಲಿನ ಜಮೀನುಗಳ ಮಾಲೀಕರು ಪ್ರತಿದಿನ ಹಳ್ಳಿಯಿಂದ ನಗರಕ್ಕೆ ಕೂಲಿ ಹರಸಿ ಗಾರೆ ಕೆಲಸ,ಫಾಕರ್್ ಕೆಲಸ,ಪ್ಲಂಬರ್ ಕೆಲಸಕ್ಕೆಂದು ಹೊರಟರೆ ನಾವು ಮೈಸೂರಿನಿಂದ ಇಲ್ಲಿಗೆ ತೋಟದ ಕೆಲಸಕ್ಕೆಂದು ಬರುತ್ತೇವೆ.ಈ ವೈರುಧ್ಯಕ್ಕೆ ಏನೆನ್ನಬೇಕು. ತೋಟಕ್ಕೆ ಮಾಲೀಕರಾಗಬೇಕಿದ್ದವರು ಕೂಲಿಗಳಾಗಿ ಕೆಲಸ ಹರಸಿ ಹೋಗುವುದನ್ನು ನೋಡಿದರೆ ಕರುಳು ಚುರುಕ್ ಎನ್ನುತ್ತದೆ. ವ್ಯವಸ್ಥೆಯ ಬಗ್ಗೆ ಬೇಸರವಾಗುತ್ತದೆ. ರೈತರ ಬದುಕು ಕಂಡು ಜೀವ ಹಿಂಡಿದಂತಾಗುತ್ತದೆ ಎಂದು ವಿಷಾದಿಂದ ನುಡಿದರು ಸ್ವಾವಲಂಬಿ ರೈತ ಮಹಿಳೆ ಎಂ.ಇಂದಿರಾ.
ಮೈಸೂರಿನ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಲ್ಲಿ ಸಹಾಯಕ ಅಭಿವೃದ್ಧಿ ಯೋಜನಾಧಿಕಾರಿಯಾಗಿ ನಿವೃತ್ತರಾಗಿರುವ ಅರವತ್ತೈದು ವರ್ಷದ ಇಂದಿರಾ ಅವರ ಜೀವನ ಪ್ರೀತಿ,ರೈತರ ಬಗೆ ಅವರಿಗಿರುವ ಕಾಳಜಿ, ಅವರು ಮಾಡುತ್ತಿರುವ ಪ್ರಯೋಗಗಳು ಕೃಷಿಯ ಬಗ್ಗೆ ನಿರ್ಲಕ್ಷ್ಯದಿಂದ ಮಾತನಾಡುವವರ ಕಣ್ಣು ತೆರೆಸುವಂತಿವೆ. ನೀರಾವರಿ ಇಲಾಖೆಯಲ್ಲಿ ಮೆನೇಜರ್ ಆಗಿ ನಿವೃತ್ತರಾಗಿರುವ ಇಂದಿರಾ ಅವರ ಪತಿ ಬಿ.ಜಯರಾಂ ಕೃಷಿ ಕೆಲಸಕ್ಕೆ ಸಾಥ್ ನೀಡುತ್ತಾ ಪತ್ನಿಯ ಸಾಧನೆಗೆ ನೆರವಾಗಿದ್ದಾರೆ.
ಖಾಸಗಿ ಕಂಪನಿಯೊಂದರಲ್ಲಿ ಸ್ಟ್ರಕ್ಚರಲ್ ಇಂಜಿನಿಯರ್ ಆಗಿರುವ ಮಗ ಜೆ.ವಿಶ್ವಾಸ್ ನೌಕರಿ ಬಿಟ್ಟು ಬೇಸಾಯದಲ್ಲಿ ತೊಡಗಿಸಿಕೊಳ್ಳುವ ಆಲೋಚನೆಯಲ್ಲಿದ್ದಾರೆ. ತೋಟದಲ್ಲಿ ಹೊಸದಾಗಿ ಬುಶ್ ತಳಿಯ ಮೆಣಸು ಕೃಷಿ ಮಾಡಲು ಯೋಜನೆ ಹಾಕಿಕೊಂಡಿದ್ದಾನೆ ಎನ್ನುತ್ತಾರೆ ಇಂದಿರಾ.
ಐದು ಎಕರೆ ಪ್ರದೇಶದಲ್ಲಿ ರೆಡ್ ಲೇಡಿ ಪಪ್ಪಾಯಿ ಮತ್ತು ಬಾಳೆ ಬೆಳೆಯನ್ನು ಮುಖ್ಯ ಆದಾಯ ಬೆಳೆಯಾಗಿ ಬೆಳೆಯುತ್ತಿರುವ ಇಂದಿರಮ್ಮ ಅಂತರ ಬೆಳೆಯಾಗಿ ಚೆಂಡು ಹೂ,ಕಲ್ಲಂಗಡಿ, ಡಿಸ್ಕೋ ತಳಿಯ ಕುಂಬಳಕಾಯಿ ಬೆಳೆಯುತ್ತಾರೆ. ತೋಟದ ಸುತ್ತ 125 ಟೀಕ್ , 250 ಸಿಲ್ವರ್, ಹತ್ತು ಹೆಬ್ಬೇವು, 150 ತಿಪಟೂರ್ ಟಾಲ್ ತಳಿಯ ತೆಂಗು, ಹತ್ತು ಎಳನೀರು ತಳಿಯ ತೆಂಗಿನ ಮರಗಳಿವೆ. ವಿಶೇಷವೆಂದರೆ ವರ್ಷದ ಎಲ್ಲಾ ಕಾಲದಲ್ಲೂ ಇವರ ತೋಟದಲ್ಲಿ ಪಪ್ಪಾಯಿ ಗಿಡ ಇರುವಂತೆ ನೋಡಿಕೊಳ್ಳಲಾಗುತ್ತದೆ. ಇದೆ ಇವರ ಯಶಸ್ವಿ ಕೃಷಿಯ ಗುಟ್ಟು. ಚಾಮರಾಜನಗರದ ಎಡೆಯೂರಿನ ಬಸವರಾಜು ಪ್ರಮಾಣಿಕ ಕಾವಲುಗಾರರಾಗಿ ತೋಟದ ಕೆಲಸ ಮಾಡುತ್ತಿದ್ದು ಅವರನ್ನು ಇಂದಿರಮ್ಮ ಮನೆಯ ಮಗನಂತೆ ನೋಡಿಕೊಳ್ಳುತ್ತಿದ್ದಾರೆ. ತೋಟದಲ್ಲಿ ಎರಡು ಬೋರ್ವೆಲ್ಗಳಿದ್ದು ಹನಿ ನೀರಾವರಿ ಪದ್ಧತಿಯನ್ನು ಅಳವಡಿಸಿಕೊಳ್ಳಲಾಗಿದೆ.ನೀರಿಗೆ ಕೊರತೆ ಇಲ್ಲ. ಆದರೆ ವಿದ್ಯುತ್ನದ್ದೇ ನಮಗೆ ದೊಡ್ಡ ಸಮಸ್ಯೆ ಎನ್ನುತ್ತಾರೆ ಇಂದಿರಮ್ಮ.
ಹಣದ ಗಿಡ ಪಪ್ಪಾಯಿ : ವರ್ಷದ ಎಲ್ಲಾ ಕಾಲದಲ್ಲೂ ತೋಟದಲ್ಲಿ ಪಪ್ಪಾಯಿ ಇರುತ್ತದೆ. ಇದು ನಮಗೆ ಪ್ರತಿವಾರ ಹಣ ತಂದುಕೊಡುತ್ತದೆ. ವ್ಯಾಪಾರಿಗಳು ತೋಟಕ್ಕೆ ಬಂದು ಪ್ರತಿ ಕೆ.ಜಿ. ಪಪ್ಪಾಯಿ ಹಣ್ಣಿಗೆ 12 ರೂಪಾಯಿ ಕೊಟ್ಟು ಖರೀದಿಸುತ್ತಾರೆ. ಪಪ್ಪಾಯಿ ಹೆಚ್ಚು ಕೊಯ್ಲು ಬಂದರೆ ಮೈಸೂರಿನ ವ್ಯಾಪಾರಿಯೊಬ್ಬರಿಗೆ ಕರೆ ಮಾಡಿದರೆ ಅವರು ತೋಟಕ್ಕೇ ಬಂದು ಹಣ ಕೊಟ್ಟು ತೆಗೆದುಕೊಂಡು ಹೋಗುತ್ತಾರೆ. ಪಪ್ಪಾಯಿ ತೂಕ ಮಾಡಲು ನಾವೆ ತೂಕದ ಯಂತ್ರವೊಂದನ್ನು ಇಟ್ಟುಕೊಂಡಿದ್ದೇವೆ. ಹಾಗಾಗಿ ಮೋಸ ಹೋಗುವ ಮಾತೆ ಇಲ್ಲ. ಕೆಲವು ಸಲ ನೆರವಾಗಿ ಹಾಫ್ ಕಾಮ್ಸ್ಗೆ ಕಳುಹಿಸುತ್ತೇವೆ. ಅಲ್ಲಿ ಹಣ್ಣನ್ನು ತೂಕಮಾಡಿಕೊಂಡು ಬ್ಯಾಂಕ್ ಖಾತೆಗೆ ಹಣ ಜಮಾ ಮಾಡುತ್ತಾರೆ ಎನ್ನುತ್ತಾರೆ ಇಂದಿರಮ್ಮ.
ಇಲ್ಲಾ ಕಡೆ ರೈತರನ್ನು ವಂಚಿಸಲು ಮಧ್ಯವತರ್ಿಗಳು ಹೊಂಚುಹಾಕಿ ಕಾಯುತ್ತಿರುತ್ತಾರೆ ಇಂತಹವರ ಬಗ್ಗೆ ರೈತರು ತುಂಬಾ ಎಚ್ಚರಿಕೆಯಿಂದ ಇರುವುದು ಅವಶ್ಯಕ ಎಂದು ಹೇಳುವುದನ್ನು ಅವರು ಮರೆಯುವುದಿಲ್ಲ.ಸ್ವತಃ ಅವರೆ ಮಧ್ಯವತರ್ಿಗಳಿಂದ ಮೋಸಹೋಗಿ ತಮ್ಮ ಹೆಸರಿನಲ್ಲೆ ತರಕಾರಿ ಮಂಡಿ ಲೇಸನ್ಸ್ ಮಾಡಿಸಿಕೊಂಡು, ಬನ್ನಿಮಂಟಪದ ಹತ್ತಿರ ಇರುವ ಬಂಬೂ ಬಜಾರ್ನಲ್ಲಿ ಅಂಗಡಿಯೊಂದನ್ನು ತೆರೆದಿದ್ದಾರೆ.
ನಮ್ಮದೆ ನರ್ಸರಿ : ಒಂದು ಎಕರೆ ಪ್ರದೇಶದಲ್ಲಿ ಪಪ್ಪಾಯಿ ಬೆಳೆಯಲು ಐವತ್ತು ಸಾವಿರ ರೂಪಾಯಿ ವೆಚ್ಚಮಾಡಿದರೆ ಒಂದುವರೆ ವರ್ಷದಲ್ಲಿ ಮೂರು ಲಕ್ಷಕ್ಕೂ ಅಧಿಕ ಆದಾಯ ತರುವುದು ಗ್ಯಾರಂಟಿ ಎಂದು ಅನುಭವದಿಂದ ಕಂಡುಕೊಂಡಿರುವ ಇಂದಿರಮ್ಮ ವೈಜ್ಞಾನಿಕ ರೀತಿಯಲ್ಲಿ ಪಪ್ಪಾಯಿ ಕೃಷಿ ಮಾಡುವುದನ್ನು ಹೇಳಿಕೊಡುತ್ತಾರೆ.
ದೃಢೀಕೃತ ಕಂಪನಿಯಿಂದ ಪಪ್ಪಾಯಿ ಬೀಜ ಖರೀದಿಸುವ ಇವರು ತಾವೆ ಸ್ವತಃ ನರ್ಸರಿಯಲ್ಲಿ ಗಿಡಗಳನ್ನು ಬೆಳೆಸುತ್ತಾರೆ. ನರ್ಸರಿಯ ಬಗ್ಗೆ ರೈತರಿಗೆ ತಿಳಿವಳಿಕೆ ನೀಡುವವರೆ ಇಲ್ಲ ಎನ್ನುವ ಇಂದಿರಮ್ಮ ನರ್ಸರಿ ಮಾಡಿಕೊಳ್ಳುವ ಮುನ್ನ ಹಲವು ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುತ್ತಾರೆ.
ಸಗಣಿ ಗೊಬ್ಬರ,ಮರಳು,ಕೆಮ್ಮಣ್ಣು,ಕೋಕೋ ಫಿಟ್ ನಾಲ್ಕನ್ನು ಸಮ ಪ್ರಮಾಣದಲ್ಲಿ ನೀರು ಹಾಕಿ ಮಿಶ್ರಣಮಾಡಿ ಪ್ಲಾಸ್ಟಿಕ್ ಕವರ್ಗೆ ತುಂಬಬೇಕು. ಮೇಲ್ಭಾಗದಲ್ಲಿ ಮುಕ್ಕಾಲು ಇಂಚು ಪ್ಲಾಸ್ಟಿಕ್ ಕವರ್ ಖಾಲಿ ಇರುವಂತೆ ನೋಡಿಕೊಳ್ಳಬೇಕು. ಮಣ್ಣು ತುಂಬಿದ ಪ್ಲಾಸ್ಟಿಕ್ ಕವರ್ಗೆ ಒಂದು ಕಡ್ಡಿತೆಗೆದುಕೊಂಡು ಕಾಲು ಇಂಚು ಆಳ ಬರುವಂತೆ ಚುಚ್ಚಬೇಕು. ಅಲ್ಲಿಗೆ ಪಪ್ಪಾಯಿ ಬೀಜವನ್ನು ಹಾಕಿ ಬೆರಳಿನಲ್ಲಿ ಮೃದುವಾಗಿ ಮುಚ್ಚಬೇಕು.ನಂತರ ಮಿಶ್ರಣ ಮಾಡಿದ ಸ್ವಲ್ಪ ಪ್ರಮಾಣದ ಮಣ್ಣನ್ನು ಮೇಲೆ ಹಾಕಬೇಕು. ನಂತರ ಪ್ಲಾಸ್ಟಿಕ್ ಹಾಳೆಯನ್ನು ಹೊದಿಕೆಯಾಗಿ ಮೂರು ದಿನಗಳವರೆಗ ಮುಚ್ಚಿ ನಂತರ ತೆಗೆಯಬೇಕು. ಆರರಿಂದ ಎಂಟು ದಿನಗಳವರೆಗೆ ಬೀಜಗಳು ಮೊಳಕೆ ಬರುತ್ತವೆ.ಹೀಗೆ ಮಾಡುವುದರಿಂದ ಶೇಕಡ 80 ರಷ್ಟು ಬೀಜಗಳು ಮೊಳಕೆ ಬರುತ್ತವೆ. ಒಂದು ತಿಂಗಳವರೆಗೆ ನರ್ಸರಿಯಲ್ಲಿ ಗಿಡಗಳನ್ನು ಪೋಷಣೆಮಾಡಿ ನಂತರ ಜಮೀನಿನಲ್ಲಿ ನಾಟಿ ಮಾಡಲಾಗುತ್ತದೆ.
ಬೇಸಾಯ ಕ್ರಮ : ಗಿಡಗಳನ್ನು ಜಮೀನಿಗೆ ಹಾಕುವ ಮೊದಲು ಕೊಟ್ಟಿಗೆ ಗೊಬ್ಬರವನ್ನು ಮಣ್ಣಿನಲ್ಲಿ ಸೇರಿಸಿ ಮೂರ್ನಾಲ್ಕು ಬಾರಿ ಉಳುಮೆ ಮಾಡಿಕೊಳ್ಳಬೇಕು. ಸಾಲಿನಿಂದ ಸಾಲಿಗೆ ಆರು ಅಡಿ,ಗಿಡದಿಂದ ಗಿಡಕ್ಕೆ ಎಂಟು ಅಡಿ ಬರುವಂತೆ ಗಿಡಗಳನ್ನು ನಾಟಿ ಮಾಡಬೇಕು. ಇದಕ್ಕೂ ಹೆಚ್ಚು ಶ್ರಮ ಪಡುವ ಅಗತ್ಯವಿಲ್ಲ. ಗುದ್ದಲಿಯಲ್ಲಿ ಆಳವಾಗಿ ಗುಂಡಿ ತೆಗೆದು ಗಿಡವನ್ನು ಕೂರಿಸಿ ಮೇಲ್ಮಣ್ಣನ್ನು ಗಿಡದ ಬೇರಿಗೆ ತೊಂದರೆಯಾಗದಂತೆ ಮುಚ್ಚಬೇಕು.ನಂತರ ತಾಯಿನೀರು ಅಂತ ಪ್ರತಿ ಗಿಡಕ್ಕೂ ಒಂದು ಲೀಟರ್ನಷ್ಟು ನೀರು ಕೊಡಬೇಕು.
ಪಪ್ಪಾಯಿಯಲ್ಲಿ ಅಂತರ ಬೆಳೆಯಾಗಿ ಚೆಂಡು ಹೂ ಹಾಕಲಾಗಿದ್ದು ಇದು ರೋಗ ತಡೆಯಾಗಿ ಕೆಲಸಮಾಡುತ್ತದೆ. ಜೊತೆಗೆ ಪಪ್ಪಾಯಿ ಗಿಡ ಹಾಕಲು ಮಾಡಿದ್ದ ಖಚ್ರ್ಚನ್ನು ತಂದುಕೊಟ್ಟಿದೆ. ದಸರಾ ಸಮಯದಲ್ಲಿ ಒಳ್ಳೆಯ ದರಕ್ಕೆ ಚೆಂಡು ಹೂ ಮಾರಾಟವಾಗಿ ಪಪ್ಪಾಯಿಗೆ ಮಾಡಿದ್ದ ಖಚ್ಚರ್ೆಲ್ಲಾ ಚೆಂಡು ಹೂವಿನಿಂದಲೆ ಬಂದಿದೆ ಎನ್ನುತ್ತಾರೆ ಇಂದಿರಮ್ಮ.
ಲೋಕಸರದ ತೆಂಗು : ತೋಟದಲ್ಲಿ ಹಾಕಿರುವ ಎಲ್ಲಾ ತೆಂಗುಗಳು ಮಂಡ್ಯ ಜಿಲ್ಲೆಯ ಲೋಕಸರದಲ್ಲಿರುವ ತೆಂಗು ಮಂಡಳಿಯಿಂದ ತಂದು ಹಾಕಿರುವುದು. ಮಟ್ಟೆ ಸುಲಿದ ಒಂದು ತೆಂಗಿನ ಕಾಯಿ ಸರಾಸರಿ 700 ಗ್ರಾಂ ಬರುತ್ತದೆ. ಬೇರೆ ತೋಟದ ತೆಂಗಿನಕಾಯಿ ಸುಲಿದಾಗ 500 ಗ್ರಾಂ ಮಾತ್ರ ತೂಗುತ್ತದೆ. ಆದ್ದರಿಂದ ರೈತರು ಲೋಕಸರದ ತೆಂಗು ಬೋಡರ್್ನವರಿಂದ ತೆಂಗು ಸಸಿಗಳನ್ನು ತಂದು ಹಾಕುವುದು ಒಳ್ಳೆಯದು ಎಂದು ಇಂದಿರಮ್ಮ ಸಲಹೆ ನೀಡುತ್ತಾರೆ. ರೈತರಿಗೆ ಲೋಕಸರದಲ್ಲಿರು ತೆಂಗು ಮಂಡಳಿಯಲ್ಲಿ ತೆಂಗಿನ ಸಸಿಗಳು ಲಭ್ಯ ಇವೆ. ಆಸಕ್ತರು ಖರೀದಿಸಬಹುದು ಎನ್ನುತ್ತಾರೆ.
ಪಿಂಜರಪೋಲಿನ ಗೊಬ್ಬರ : ತಮ್ಮ ತೋಟಕ್ಕೆ ಬೇಕಾಗ ಕೊಟ್ಟಿಗೆ ಗೊಬ್ಬರವನ್ನು ಮೈಸೂರಿನ ಪಿಂಜರಪೋಲಿನಿಂದ ಖರೀದಿಸುತ್ತೇವೆ. ಒಂದು ಲೋಡ್ ಸಗಣಿ ಗೊಬ್ಬರಕ್ಕೆ 16 ಸಾವಿರ ರೂ,ಕೊಡುತ್ತೇವೆ. ಈ ಗೊಬ್ಬರವನ್ನು ಬಳಸುವುದರಿಂದ ಕಳೆ ಹೆಚ್ಚು ಬರುವುದಿಲ್ಲ. ಸಗಣಿಯ ಗುಣಮಟ್ಟವು ಉತ್ತಮವಾಗಿರುತ್ತದೆ ಎನ್ನುತ್ತಾರೆ.
ತಮ್ಮ ತೋಟದಲ್ಲಿ ಬಹುಪಾಲು ವಿಧವೆಯರೆ ಕೆಲಸಮಾಡಲು ಬರುತ್ತಾರೆ. ಅವರಿಗೂ ನಾವು ಕೆಲಸನೀಡಿ ಗ್ರಾಮೀಣ ಮಹಿಳೆಯದು ಆಥರ್ಿಕ ಸ್ವಾವಲಂಬನೆ ಬದುಕು ಕಟ್ಟಿಕೊಳ್ಳಲು ನೆರವಾಗುತ್ತಿದ್ದೇವೆ. ತಮ್ಮಲ್ಲಿ ಬೆಳೆದ ತರಕಾರಿ, ಬಾಳೆ, ಪಪ್ಪಾಯಿಯನ್ನು ಚಾಮುಂಡಿ ಬೆಟ್ಟದ ದೇವಸ್ಥಾನ, ಮಹದೇಶ್ವರ ಬೆಟ್ಟ,ಅನಾಥಶ್ರಮಗಳಿಗೂ ಆಗಾಗ ಕಳುಹಿಸಿಕೊಡುವ ಇಂದಿರಮ್ಮ ತೋಟದಿಂದ ಬರುವ ಆದಾಯದ ಸ್ವಲ್ಪಭಾಗವನ್ನು ಸಂಬಂಧಿಕರಿಗೆ ಕೊಟ್ಟುಬಿಡುವ ಮೂಲಕ ಉದಾರತೆ ಮೆರೆಯುತ್ತಾರೆ.ತಾವು ತಂದ ಯಾವುದೆ ಬೀಜಗಳು ಮೊಳಕೆಯೊಡೆಯದಿದ್ದರೆ ಕಾನೂನು ಸಮರಕ್ಕೂ ಮುಂದಾಗುವ ಇವರು ಕೃಷಿಯನ್ನು ಗಂಭೀರವಾಗಿ ತೆಗೆದುಕೊಂಡಿರುವ ಸ್ವಾಭಿಮಾನಿ ರೈತ ಮಹಿಳೆಯಾಗಿದ್ದಾರೆ. ಆಸಕ್ತರು ಹೆಚ್ಚಿನ ಮಾಹಿತಿಗೆ ಇಂದಿರಮ್ಮ 9886140175 ಸಂಪಕರ್ಿಸಬಹುದು